ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ, ಸಹಸ್ರನಾರಿಕೇಳ ಗಣಪತಿ ಯಾಗ, ಸತ್ಯಗಣಪತಿ ವ್ರತ, ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ರವಿವಾರ ನಡೆಯಿತು.
ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ. ಪದ್ಮನಾಭ ಉಪಾಧ್ಯಾಯ, ನಿರಂಜನ್ ಉಪಾಧ್ಯಾಯ, ಆಡಳಿತ ಹಾಗೂ ಅರ್ಚಕ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿರಳವಾದ ಮಳೆ ಹಾಗೂ ರವಿವಾರವಾದ್ದರಿಂದ ಸಂಕಷ್ಟಹರ ಚತುರ್ಥಿಗೆ ಮುಂಜಾನೆಯಿಂದಲೇ ಜಿಲ್ಲೆಯ ಮೂಲೆ ಮೂಲೆಯಿಂದಲೂ 20 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಐದು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ಆಡಳಿತ ಧರ್ಮದರ್ಶಿಗಳು ತಿಳಿಸಿದ್ದಾರೆ.
ಸಂಜೆ ನೇರಂಬಳ್ಳಿಯ ಜಯಶ್ರೀ ಪ್ರಾಣೇಶ ತಂತ್ರಿ ಹಾಗೂ ಸಹೋದರಿಯರಿಂದ ಶಾಸ್ತ್ರೀಯ ಭಕ್ತಿ ಸಂಗೀತ, ಹಾಗೂ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದ ಹಾಗೂ ಸಿದ್ಧಾಪುರದ ಯಕ್ಷ ನುಡಿಸಿರಿ ಬಳಗ ಇವರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ: ‘ಸಮರ ಸನ್ನಾಹ’ ಪ್ರದರ್ಶನಗೊಂಡಿತು.
ರಾತ್ರಿ ಮಹಾರಂಗ ಪೂಜಾದಿ ರಜತ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತು.